ಸಂಗೀತಾ ಕಟ್ಟಿ ಕುಲಕರ್ಣಿ - ಇವರು ಸಂಗೀತಾ ಕಟ್ಟಿ ಎಂಬ ಹೆಸರಿನಲ್ಲಿ ಜನಪ್ರಿಯರಾಗಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಪ್ರಸಿದ್ಧ ಗಾಯಕಿ. ಸುಗಮಸಂಗೀತ ಗಾಯಕಿಯೂ ಚಲನಚಿತ್ರದ ಹಿನ್ನೆಲೆಗಾಯಕಿಯೂ ಹೌದು. == ಪರಿಚಯ == ಸಂಗೀತಾ ಕಟ್ಟಿಯವರು ಕರ್ನಾಟಕದ ಧಾರವಾಡದಲ್ಲಿ ಅಕ್ಟೋಬರ್ ೭, ೧೯೭೦ರಂದು ಹುಟ್ಟಿದರು. ಇವರು ಡಾ.ಎಚ್.ಎ.ಕಟ್ಟಿ ಮತ್ತು ಶ್ರೀಮತಿ ಭಾರತಿ ಇವರ ಮಗಳು. ಇವರು ದಸರೆಯ ಸರಸ್ವತೀಪೂಜೆಯ ದಿನ ಹುಟ್ಟಿದ್ದು. == ಬಾಲ್ಯ == ಸಂಗೀತದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಹುಟ್ಟಿದ ಸಂಗೀತಾ ಕಟ್ಟಿ ಪ್ರಾರಂಭದ ಪಾಠಗಳನ್ನು ತಂದೆಯಿಂದಲೇ ಪಡೆದರು. ನಾಲ್ಕು ವರ್ಷದವರಿದ್ದಾಗ ನೌಷಾದ್ ಅಲಿಯವರನ್ನು ಭೇಟಿಯಾಗಿದ್ದು ಅವರ ಬದುಕಿಗೊಂದು ತಿರುವು ಕೊಟ್ಟಿತು. ನೌಷಾದ್ ಅಲಿ ಯವರು ಆಕೆಗೆ ಕೆಲವು ರಾಗಗಳನ್ನು ಹಾಡುವಂತೆ ಸೂಚಿಸಿದರು. ಈ ಬಾಲಪ್ರತಿಭೆಯಿಂದ ಪ್ರಭಾವಿತರಾದ ಅವರು ಆಕೆಯನ್ನು ಶಿಷ್ಯೆಯನ್ನಾಗಿ ಮಾಡಿಕೊಂಡರು. ಶ್ರೀ ಶೇಷಗಿರಿ ದಂಡಾಪುರ ಮತ್ತು ಪಂಡಿತ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ ಪಡೆದು ಆಕೆ ಹೆಚ್ಚಿನ ತರಬೇತಿಯನ್ನು ಕಿರಾಣಾ ಮತ್ತು ಗ್ವಾಲಿಯರ್ ಘರಾಣಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಸುಮಾರು ಹನ್ನೆರಡು ವರ್ಷಗಳ ಕಾಲ ಪಡೆದರು. ಈಗ ಅವರು ಪದ್ಮವಿಭೂಷಣ ಗಾನಸರಸ್ವತಿ ಶ್ರೀಮತಿ ಕಿಶೋರಿ ಅಮೋನ್ಕರ್ ಅವರ ಶಿಷ್ಯೆ. == ಶಿಕ್ಷಣ == ಸಂಗೀತಾ ಅವರು ರಸಾಯನಶಾಸ್ತ್ರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಅವರು ಕನ್ನಡವಷ್ಟೇ ಅಲ್ಲದೆ ಹಿಂದಿ, ಇಂಗ್ಲೀಷ್, ಮರಾಠೀ ಭಾಷೆಗಳನ್ನು ಚೆನ್ನಾಗಿ ಬಲ್ಲರು. == ಇತರ ಮಾಹಿತಿ == ಈವರೆಗೆ ಅವರು ೨೫೦೦ ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೊದಲ ಕಾರ್ಯಕ್ರಮವನ್ನು ಅವರು ನಾಲ್ಕು ವರ್ಷದವರಿದ್ದಾಗ ಕೊಟ್ಟರು. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಂ, ಕೆನಡಾ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಬಹುಮುಖ್ಯ ಸಂಗೀತ ಸಮಾರೋಹಗಳಲ್ಲಿ ಸಾಮಾನ್ಯವಾಗಿ ಅವರ ಕಾರ್ಯಕ್ರಮ ಇದ್ದೇ ಇರುತ್ತದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅವರು ಸಂಗೀತ ವನ್ನು ಕಲಿಸುತ್ತಿದ್ದರು. == ಪ್ರಶಸ್ತಿಗಳು ಮತ್ತು ಗೌರವಗಳು == ೨೦೦೬-೨೦೦೭ ರ ಸುವರ್ಣಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದರು. ( ಇದು ರಾಜ್ಯದ ಅತ್ಯುನ್ನತ ಗೌರವ). ಬರೀ ನಾಲ್ಕು ವರ್ಷದವರಿದ್ದಾಗ ಸಂಗೀತ ಸಾಮ್ರಾಟ್ ನೌಷಾದ್ ಸಾಹೇಬರಿಂದ " ಸಂಗೀತದ ಅದ್ಭುತ" ಎಂದು ಹೊಗಳಿಸಿಕೊಂಡರು. ನವೆಂಬರ್ ೧೯೭೫ ರಲ್ಲಿ ಮಕ್ಕಳದಿನದಂದು ಆಕಾಶವಾಣಿಯಲ್ಲಿ ಬಾಲಪ್ರತಿಭೆಯಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕೊಟ್ಟರು. ೧೯೭೭ ರಲ್ಲಿ ಮದರ್ ತೆರೇಸಾರಿಂದ ಆಶೀರ್ವಾದ ಪಡೆದರು. ದಾಸಮಂಜರಿ ಎಂಬ ಮೊದಲ ಭಜನಸಂಗ್ರಹವನ್ನು ಧ್ವನಿಮುದ್ರಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಜ್ಯೂನಿಯರ್ , ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದರು. ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತಗಳಲ್ಲಿ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿಗಳನ್ನು ಪಡೆದರು. ನಾಗಪುರದಲ್ಲಿ ೧೯೮೭ ರಲ್ಲಿ ನಡೆದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ೧೯೯೦ ರಲ್ಲಿ - ನವದೆಹಲಿಯಲ್ಲಿ ನಡೆದ "ರಾಷ್ಟ್ರೀಯ ಸಮಗ್ರತೆಯ ಕ್ಯಾಂಪ್"ನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು. ಅಮೇರಿಕ , ಇಂಗ್ಲೆಂಡುಗಳ "ಅಕ್ಕ" ಸಮ್ಮೇಳನಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ಮಂಗಲಪಲ್ಲಿ ಬಾಲಮುರಳಿಕೃಷ್ಣ, ಕೆ. ಜೆ. ಯೇಸುದಾಸ್, ಪಿ. ಬಿ. ಶ್ರೀನಿವಾಸ್,ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ರಾಜಕುಮಾರ್ ಅಂತಹ ಪ್ರಸಿದ್ದರೊಡನೆ ಹಾಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಸಂಗೀತನಿರ್ದೇಶಕರಾದ ಉಪೇಂದ್ರಕುಮಾರ್, ಎಮ್. ರಂಗರಾವ್ , ವಿಜಯಭಾಸ್ಕರ್, ರಾಜನ್ ನಾಗೇಂದ್ರ, ಸಿ. ಅಶ್ವತ್ಥ್ ಎಂ. ಎಂ. ಕೀರ್ವಾಣಿ, ಹಂಸಲೇಖಾ, ಮನೋಹರ್ ಮುಂತಾದವರೊಡಗೂಡಿ ಕೆಲಸ ಮಾಡಿದ್ದಾರೆ. ಬೆಂಗಳೂರು ಆಕಾಶವಾಣಿಗಾಗಿ ಭಾರತರತ್ನ ಪಂಡಿತ್ ರವಿಶಂಕರ್ ಅವರ ಠುಮರಿ ರಚನೆಗಳನ್ನು ಹಾಡಿದ್ದಕ್ಕಾಗಿ ಅವರಿಂದ ಪ್ರಶಂಸೆ ಪಡೆದಿದ್ದಾರೆ ಬೆಂಗಳೂರಿನಲ್ಲಿ ನಡೆದ ೬೨ನೇ ಎಐಸಿಸಿ ಸಮಾವೇಶದಲ್ಲಿ "ವಂದೇಮಾತರಂ" ಹಾಡಿದುದಕ್ಕಾಗಿ ಎಐಸಿಸಿ ಅಧ್ಯಕ್ಷೆ ಸ್ರೀಮತಿ ಸೋನಿಯಾಗಾಂಧಿ ಅವರಿಂದ ವೈಯುಕ್ತಿಕ ಅಭಿನಂದನೆಗಳನ್ನು ಪಡೆದಿದ್ದಾರೆ. ಅಮೇರಿಕದ ಓಹಿಯೋ ವಿಶ್ವವಿದ್ಯಾನಿಲಯದಲ್ಲಿ , ಸಂಗೀತದಲ್ಲಿ ಮಹಿಳೆಯ ಪಾತ್ರ ಮತ್ತು ಭಾರತೀಯ ಸಂಗೀತದ ಮಹತ್ವ ಕುರಿತು ಭಾಷಣ ಮಾಡಿದರು. ಅನೇಕ ಕಾರ್ಯಕ್ರಮಗಳು ಮತ್ತು ಆಲ್ಬಂಗಳಿಗೆ ಸಂಯೋಜನೆ ಮಾಡಿದರು. ಸಂಗೀತಸರಿತಾ ಎಂಬ ಶಾಸ್ತ್ರೀಯ ಸಂಗೀತ ರಾಗಗಳನ್ನು ಭಾರತೀಯ ಸಿನೇಮಾ ಮೂಲಕ ಪರಿಚಯಿಸುವ ಕಾರ್ಯಕ್ರಮಕ್ಕಾಗಿ ಸಂಶೋಧನೆ ಮಾಡಿದರು. ಈ ಕಾರ್ಯಕ್ರಮ ವನ್ನು ಜಗತ್ತಿನಾದ್ಯಂತ ಯಶಸ್ವಿಯಾಗಿ ನೀಡಿದರು. ಶ್ರೀಮತಿ ಸಂಗೀತಾ ಕಟ್ಟಿ ಕುಲ್ಕರ್ಣಿಯವರು ಪ್ರತಿ ವರ್ಷ ಮಾಘ ಮಾಸದಲ್ಲ ಬಿಜಾಪುರ ಜಿಲ್ಹೆಯ ಯಲಗೂರಕ್ಕೆಸ್ವಯಂ ಪ್ರೇರಣೆಯಿಂದ ಯಲಗೂರೇಶನಿಗೆ ಸಂಗೀತ ಸೇವೆ ಮಾಡುವರು. == ಉಲ್ಲೇಖ == == ಹೊರಗಿನ ಕೊಂಡಿಗಳು == ಸಂಗೀತಾ ಕಟ್ಟಿಯವರ ಅಧಿಕೃತ ಅಂತರ್ಜಾಲತಾಣ 2016-10-25 ವೇಬ್ಯಾಕ್ ಮೆಷಿನ್ ನಲ್ಲಿ. ಸಂಗೀತಾ ಕಟ್ಟಿಯವರನ್ನು ಭೇಟಿಯಾಗಿ 2008-09-25 ವೇಬ್ಯಾಕ್ ಮೆಷಿನ್ ನಲ್ಲಿ.